Thursday, July 2, 2009

ಭಾವಕ್ಕೆ ಬೇಕಿದ್ದರೆ ಮಾತ್ರ..!

ಇವನು ಹೇಗೆ ಇಷ್ಟೊಂದು ಪ್ರಶ್ನೆಗಳಿಗೆ ಉತ್ತರವಾಗಿಬಿಟ್ಟ..?! ಉತ್ತರವೋ,..ಪ್ರಶ್ನೆಯೋ - ತಡಕಾಡುವುದಕ್ಕೂ ಬಿಡದೆ ರಂಪಮಾಡಿ ಎದೆಗೆ ಆತುಕೊಂಡು ಸುಂದರ ನಗೆ ನಕ್ಕು ಸುಮ್ಮನಿರಿಸಿಬಿಟ್ಟ.

ಯಾವುದನ್ನೂ ಪ್ರಶ್ನಿಸದೆ,ತಡವರಿಸದೆ ಒಪ್ಪದ ನನ್ನ ಉಮೇದಿಗೆ ಸವಾಲೆಸೆದಂತೆ ತನ್ನ ಹಕ್ಕು ಸ್ಥಾಪಿಸಿಬಿಟ್ಟನಲ್ಲ..!

ಹಳ್ಳಿಗರ ಅಗಾಧ ನಂಬುಗೆಯ ವೈಚಿತ್ರ್ಯವನ್ನು ತನಗರಿವಿಲ್ಲದೆ ತನ್ನೊಳಗೆ ದೀಪದಂತೆ ಉರಿಸಿಟ್ಟುಕೊಂಡಿರುವವನು.’ಮುಟ್ಟಿದರೆ ಮುನಿ’ಯಂತೆ ಪ್ರತಿಯೊಂದು ಟೀಕೆ,ವಿಮರ್ಶೆ,ಹೊಗಳಿಕೆಯನ್ನು ಮನಸಾರ ಅನುಭವಿಸಲೆಂದೆ ಕಣ್ಣು ಕಿವಿ ತೆರೆದಿಟ್ಟಂತೆ ಕಂಡು ಪ್ರೀತಿ ಹುಟ್ಟಿಸುತ್ತಾನೆ..!

ಇದು ನಗುವೋ, ಮರುಕವೋ, ಕೊರಗೋ, ಬೆರಗೋ ಅಂತೂ ಯಾವುದನ್ನೂ ಮರುಪರಿಶೀಲಿಸದಂತೆ ಮರುಳು ಮಾಡಿರುವ ಮರುಳ...ಮರುಳರ ಮರುಳ..ಮರುಳು ಮಾದೇವ..
ಅಸ್ತಿತ್ವಕ್ಕೆ ಗರಬಡಿಸುವಂತೆ ಮೈಗೆಲ್ಲ ಬೂದಿ ಬಳಿದು,ಬಿಳುಚಿ, ಗಂಟು ಜಡೆ ಉದ್ದನೆ ಇಳಿ ಬಿಟ್ಟು..ಎಚ್ಚರಿಸಲೋ,ಹುಚ್ಚು ಹರಡಲೋ,ಬೆಚ್ಚಿಸಲೋ,ಅಥವ ಸುಮ್ಮನೆ ಕೊಚ್ಚಿಹೋಗಲೋ ಮಹಾದೇವನನ್ನೇ ಆವಾಹಿಸಿಕೊಂಡು ಶಿವ ಶಿವಾ ಎನಿಸಿಬಿಟ್ಟಾತ..!

ಎಲ್ಲವನ್ನೂ ನುಂಗಿ,ಒಗರು ಮೈ ಮಾಡಿಕೊಂಡು,ಅಷ್ಟಗಲ ಗಾರುಡಿಗನ ಕಣ್ಣು ಬಿಟ್ಟು,..ಸಿಟ್ಟೋ,ಸಂಕಟವೋ,ಸೆಡವೋ - ಒಂದೂ ತಿಳಿಸದೆ ತನ್ನಷ್ಟಕ್ಕೆ ತಾನು ನೆಡೆದುಬಿಡುವ ಇವನ ನಿರ್ಭಿಡೆ ಹೆಪ್ಪುಗಟ್ಟಿ ಹುಳಿಬರದೆ ಹಾಗೇ ಉಳಿದಿದೆ.

ನನ್ನ ಅಂಗಯ್ಯಂಗಳದಲ್ಲಿ ಸದ್ದಿರದೆ ಜಾಗ ಪಡೆದು ಬೆಚ್ಚಗೆ ಕರಗುತ್ತಾ ನಾನೇ ಇನ್ನೂ ಓದದೆ ಬಿಟ್ಟಿದ್ದ ಗೆರೆಗಳ ಜಾಡಿನಲ್ಲಿ ಗಮನಿಸುವ ಮೊದಲೆ ಪ್ರಯಾಣ ಬೆಳೆಸಿದ್ದಾನೆ..ಅಲೆಮಾರಿಗೆ ಗಡಿಹಾಕಿಕೊಟ್ಟ ಗರ್ವ ಪೂರ್ತಿ ನಿನಗೇ ಇರಲಿ ಎಂಬ ದೊಡ್ಡಸ್ತಿಕೆಯ ಅಭಿದಾನ ಕರುಣಿಸಿ ಸೊಗಸು ಮೂಡಿಸುವ ಅತಿ ಜಾಣತನ ಬೇರೆ..!

ಐದು ವರ್ಷಗಳ ಹಿಂದಿನ ಸಲುಗೆಗೆ ಈಗ ಹೀಗೊಂದು ಅರ್ಥ ಗಂಟು ಬೀಳುವುದು ಅವರವರ ಭಾವಕ್ಕೆ ಬೇಕಿದ್ದರೆ ಮಾತ್ರ !
ಹಳೆಯ ರದ್ದಿಯನ್ನೆಲ್ಲಾ ಹೊಸಕಿ ಹೊಸ ಹಾಳೆ ಮಾಡುವಂತೆ, ಮತ್ತೊಮ್ಮೆ ಹೊಚ್ಚಹೊಸ ಘಮಲಿನ ಅಚ್ಚಬಿಳಿಹಾಳೆ...ಅದರಲ್ಲಿ ಕಣ್ಣು ಕಿರಿದು ಮಾಡಿ ನೋಡಿದರೆ ಮಾತ್ರ ಕಾಣುವ ಮತ್ತದೇ ಬಿಳಿಯ ಅಕ್ಷರಗಳು..ಕಂಡೂ ಕಾಣದ ಸೋಗು..!!

Thursday, January 8, 2009

ಕರೆವ ದಾರಿಯ ಕಲರವ...


ಹೀಗೇ,.. ಮತ್ತೆ ಕುಕ್ಕರಗಾಲಲ್ಲಿ ಮುದ್ದೆಯಾಗಿ ಕೂತು ನನ್ನ ಪುಟ್ಟ ಡೈರಿಯ ಬೆಚ್ಚನೆ ಪುಟ ತೆರೆದು, ಅದರ ಕೆನೆಹಳದಿ ಹಾಳೆಗಳ ಆಪ್ತತೆಯಿಂದ ಮುದಗೊಳ್ಳುತ್ತಾ,ನನ್ನ ಅತ್ಯಂತ ಪ್ರಿಯ ಮಿತ್ರನ ಗಾಢ ಬೆಸುಗೆಯೋ ಎಂಬಂತೆ ಎಡಗೈಯ ಬಿಸಿಯಲ್ಲಿ ಪುಟಕರಗುವಂತೆ ಹಿಡಿದು,ಈ ಕಂಡೂಕಾಣದ ಗೆರೆಗಳನ್ನು ತೊಳೆದುಹಾಕುವಂತೆ ಅಕ್ಷರಬಿಡಿಸುವುದು ಎಂಥ ಪುಳಕ..!

ನನಗಾಗಿ ತನ್ನೆದೆಯನ್ನು ಇಷ್ಟಗಲ ತೆರೆದು,ಪ್ರತಿ ಹಲುಬಿಕೆಯ ಸ್ಪರ್ಷ ಮನಸಾರ ಪಡೆದು ಧನ್ಯತೆಯ ನಗುತೋರುವ ಈ ಪುಟಗಳಿಗಿಂತ ಮತ್ತ್ಯಾವ ಗೆಳೆಯ..?!
ಮಗುವಿನಂಥ ಮುದ್ದು ಬಣ್ಣದ ಈ ಹಾಳೆಗಳು ಹಲವು ವರ್ಷಗಳಿಂದ ನನಗಾಗಿ ಮಾತ್ರ ಇವೆ..!
ನೀಲಿ ಡಾಟ್ ಪೆನ್ ನಿಂದ ಬಿಡಿಸಿದ ಚಿತ್ರಗಳಂಥ ಅಕ್ಷರಗಳು ಸೂಸುವ ಸುವಾಸನೆ ನನ್ನನ್ನು ಅಪ್ಪಿ, ಮತ್ತೆ ಮತ್ತೆ ಕರೆ ಕಳಿಸುತ್ತದೆ.

ಬೆಳ್ಳಂಬಿಳೀ ಕ್ಯಾನ್ವಾಸ್ ನ ಇಡೀ ಆವರಣದ ಎಡಮಧ್ಯದಲ್ಲಿ ಇಟ್ಟ ಸೇಬು ಫಳಫಳ ಹೊಳೆದು ಜಗತ್ತಿನ ಅಷ್ಟೂ ಸೌಭಾಗ್ಯ ತಾನೇ ಪಡೆದಂತೆ ಹುಳಿ-ಸಿಹಿ-ಒಗರು ರುಚಿಯ ಕೆಂಪು ನಗುಬೀರುತ್ತಿದೆ.ಈ ಪುಟಗಳ ಪರಿಮಳದಂತೆಯೇ ಮೃದುವಾಗಿ ಅಪ್ಪಿ ಮುದಗೊಳಿಸುವುದು ಆ ಸೇಬಿನ ಸುವಾಸನೆ.

ಆ ಕೆಂಪು ಸೇಬನ್ನು ಬಿಳೀ ಕ್ಯಾನ್ವಾಸ್ ನಲ್ಲಿ ಇರಿಸಿ ದೂರದಿಂದ ನೋಡುತ್ತಿದ್ದಂತೆ ತುಂಟನಗು ಸುಳಿದುಹೋಗುತ್ತಿದೆ.ಪಾಪ,ಅದಕ್ಕೆ ನೆರಳುತೋರಿಸಿ ಕೂರಿಸದೆ,ಹಾಗೇ ಗಾಳಿಯಲ್ಲಿ ತೇಲಿಸುತ್ತ ಇಡೀ ಕ್ಯಾನ್ವಾಸ ನಲ್ಲಿ ಒಂಟಿಯಾಗಿ ಬಿಟ್ಟು ಸ್ವಲ್ಪ ಹೆದರಿಕೆ ಹುಟ್ಟಿಸಿದ್ದೇನೆ.ಅಚ್ಚಬಿಳೀ ಬಣ್ಣ ಕೆಂಪನ್ನು ಇಡಿಯಾಗಿ ನುಂಗಿಬಿಡಲು ತಿಣುಕುತ್ತಿದ್ದರೂ,ದಿಟ್ಟ ಸುಂದರಿಯಂತೆ ಸೆಣಸುತ್ತಲೇ ಆತಂಕಗೊಂಡಂತಿದೆ ಸೇಬು.ಆದರೆ ನಿಜಕ್ಕೂ ಬಿಳಿ ಹಿನ್ನೆಲೆಯಲ್ಲಿ ಕಿತ್ತಳೆಗೆಂಪು ಸ್ವಲ್ಪ ನೇರಳೆಗುಲಾಬಿ ರಂಗಿನಲ್ಲಿ ಅಪ್ರತಿಮ ಸುಂದರಿಯಂತೆ ಕಾಣುತ್ತಿರುವುದು ಸುಳ್ಳಲ್ಲ.ನಾಳೆ ಅದನ್ನು ಮಾತಾಡಿಸುವವರೆಗೂ ಹಾಗೇ ಇರಲಿ ಬಿಡಿ.

ಕ್ಯಾನ್ವಾಸ್ ನಲ್ಲಿ ಸೇಬು ಇರಿಸುವುದು,..ಈ ನೀಲಿ ಅಕ್ಷರ ಬಿಡಿಸುವುದು,..ಕಾಣುವ ಬಣ್ಣಗಳಷ್ಟನ್ನೂ ಎಣಿಸುವುದು,..ಸುಂದರ ನಗುವನ್ನು ಪದಗಳಿಗೆ ಇಳಿಸುವುದು,... ಇವೆಲ್ಲ ಎಂಥ ಅನೂಹ್ಯ ಸಂಕಟ ಹುಟ್ಟಿಸುತ್ತವೆ..!

ಇಂಥ ಅತಿಭಾವುಕತೆ ನನ್ನ ಎಚ್ಚರ ತಪ್ಪಿಸಿ ಎಲ್ಲೆಲ್ಲೋ ಅಲೆದಾಡಿಸುತ್ತಿರುತ್ತೆ.
ಮಾಮನ ಮನೆಯ ಗಾಢ ಮಾಧುರ್ಯ,ಕಾಡಿನ ಕತ್ತಲೆಯ ಏಕಾಂತ,ಪ್ರತಿ ವಸ್ತುವಿನಲ್ಲಿ ಅವಿತ ಗಾಂಭೀರ್ಯವನ್ನು ಪದೇ ಪದೇ ನೆನಪಿಸುವ ಮೌನ...
ಮೊನ್ನೆಯ ಭೇಟಿಯಲ್ಲಿ ಪ್ರತಿಯೊಂದು ಹೊಸ ಉಸಿರು ಹೊಸತಾಗಿಯೇ ಮನವರಿಕೆಯಾದಂತಿತ್ತು.
ಆ ಕಾಲುದಾರಿ ಕರೆದೊಯ್ದಿದ್ದು ಅಲ್ಲಿ ಜೋಡಿಸಿಟ್ಟ ಜೋಡಿ ಕುರ್ಚಿಗಳ ಬಳಿಗೆ.ಒಂದೇ ಅಳತೆಯ ಸ್ವಯಂಪೂರ್ಣ ಸುಖಿಗಳಂತೆ ಕಂಡವು ಆ ಕುರ್ಚಿಗಳು.ಯಾರ ಪರಿವೆಯೂ ಇಲ್ಲದೆ,ಅನಂತ ಸಂತೃಪ್ತಿ ಹೆಪ್ಪುಗಟ್ಟಿದ ಮೌನದಲ್ಲಿ ಪಿಸುಮಾತನ್ನೂ ಮರೆತು ಸಮಾಧಿಸ್ಥಿತಿಯಲ್ಲಿ ಐಕ್ಯವಾದಂತೆ ಕಂಡವು ಅವು.ಅಗಲ ಎಲೆಗಳ ಪುಟ್ಟ ಮರದ ರೆಂಬೆಗಳು ಕುರ್ಚಿಗಳ ತಲೆಯ ಮೇಲೆ ಹರಡಿ ಅಭಯ ನೀಡುತ್ತಿದ್ದವು.ಗುಡ್ಡದ ಮೇಲಿನ ’ಅನುರಾಗಿ’ಗಳ ಮುಂದೆ ಧಿಗ್ಗನೆ ಥಿಯೇಟರ್ ಪರದೆಯಲ್ಲಿ ಕಂಡಂತೆ ಅಷ್ಟಗಲ ಚಾಚಿಕೊಂಡ ವಿಸ್ತಾರದ ಇಳಿಜಾರಿನ ಹರವು.ವೆಂಕಟಪ್ಪನವರ ವಾಟರ್ ಕಲರ್ ಚಿತ್ರಗಳನ್ನು ನೆನಪಿಸುವ ಭೂದೃಶ್ಯ.ದೂರದ ತಿಳಿನೀಲಿ ಬೆಟ್ಟ ಅಡ್ಡಡ್ಡ ಮೈಚಾಚಿ ಮಲಗಿ,ಪಕ್ಕದ ಹಸಿರು ಮೈಗೂ ಜಾಗಬಿಟ್ಟುಕೊಟ್ಟಿದೆ..
ಅಲ್ಲೆಲ್ಲೋ ದೂರದಲ್ಲಿ ಇಷ್ಟೇ ಇಷ್ಟು ಕಾಣುವ ಬಿಳಿಗೋಡೆಯ ಕೆಂಪುಹೆಂಚಿನ ಪುಟ್ಟಮನೆ ನೋಡುಗರಲ್ಲಿ ಮುದ್ದುಹುಟ್ಟಿಸುವ ಹಟತೊಟ್ಟಂತೆ ಕಂಡಿದ್ದರಿಂದ ನಾನು ಬೇಕೆಂತಲೆ ಉದಾಸೀನ ನಟಿಸಿದೆ.ಆದರೂ ಅದು ಮುದ್ದಾಗೇ ಇತ್ತು..! ಆಹೊತ್ತು ಆಕಾಶದ ನೀಲಿ ಕೂಡ ಮೊದಲಬಾರಿಗೆ ಅತಿಶುಭ್ರವಾಗಿ ಕಂಡಿತ್ತು!

ಕುರ್ಚಿಗಳ ಬಲಪಕ್ಕದಲ್ಲಿ ಮೇಲಿನಿಂದ ಇಳಿಜಾರಿಗೆ ಜಾರುತ್ತಿದ್ದ ಕಾಲುದಾರಿ ಮಾತ್ರ ಪಕ್ಕಾ ರೊಮ್ಯಾಂಟಿಕ್ ಕಲಾವಿದನ ಪೂರ್ವಯೋಜನೆಯಂತೆಯೇ ಕಂಡು ಸಂಶಯ ಹುಟ್ಟಿಸಿತು.ಕುರ್ಚಿಗಳ ಪ್ರೇಮಸಮಾಧಿಯ ಸ್ಥಿರತೆಗೆ ಅಡಚಣೆಯ ಅಲೆಗಳ ಕಾಟ ತಪ್ಪಿಸಲೆಂಬಂತೆ 'ಇದೋ ನಿಮ್ಮ ದಾರಿ ಹೀಗೆ..' ಎಂದು ತಲೆಮೊಟಕಿ ಕರೆಯುವಂತಿತ್ತು ಕಾಲುದಾರಿಯ ನಿಲುವು.ಆದರೂ ಅದು ಹೀಗೇ ಒಂದಿಲ್ಲೊಂದು ನೆಪಮಾಡಿ ಮತ್ತೇನನ್ನೋ ನನಗಾಗಿ ತೋರಿಸಲು ತವಕಿಸುತ್ತಿದ್ದುದು ತಿಳಿದಿತ್ತಾದ್ದರಿಂದ ಮರುಮಾತಾಡದೆ ಅನುರಾಗದ ಘಮಲು ಹೀರುತ್ತಾ ಕರೆ ದಾರಿಗೆ ಕಾಲೊಪ್ಪಿಸಿದೆ...

Friday, December 19, 2008

’ಎಡ್ವರ್ಡ್ ಮಾನೆ’ಯೊಂದಿಗೆ -’ಲಂಚನ್ ಆನ್ ದ ಗ್ರಾಸ್’



(ನನ್ನ ಮೆಚ್ಚಿನ ಫ಼್ರೆಂಚ್ ಕಲಾವಿದರ ಪೈಕಿ ಎಡ್ವರ್ಡ್ ಮಾನೆ ಕೂಡ ಒಬ್ಬ.ಆತನ ದಿಟ್ಟ ನಿಲುವು,ಅಸಾಧಾರಣ ಅಭಿವ್ಯಕ್ತಿ ನನ್ನನ್ನು ಸದಾ ಆಕರ್ಷಿಸಿವೆ.ಪ್ರಬಂಧದ ಆಯ್ದ ಸಾಲುಗಳು, ನಿಮಗಾಗಿ...)

ಎಡ್ವರ್ಡ್ ಮಾನೆ ಪಾಶ್ಚಾತ್ಯ ಕಲಾಚರಿತ್ರೆಯ ದಿಕ್ಕನ್ನು ಬದಲಿಸಿದ ಅತ್ಯಂತ ಪ್ರಮುಖ ಕಲಾವಿದರಲ್ಲಿ ಒಬ್ಬ.ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಸೇತುವಿನಂತೆ ನಿಂತು,ಹೊಸಪೀಳಿಗೆಯ ಕಲಾವಿದರನ್ನು ಹುಟ್ಟುಹಾಕುವುದರಲ್ಲಿನ ಇವನ ಪಾತ್ರ ಉಲ್ಲೇಖಾರ್ಹವಾದುದು.

ಈತನ ’ಲಂಚನ್ ಆನ್ ದಿ ಗ್ರಾಸ್’ ಮತ್ತು ’ಒಲಂಪಿಯ’ ಕಲಾವಲಯದಲ್ಲಿ ಹುಟ್ಟುಹಾಕಿದ ಕಂಪನ ಆಗಿನ ಮನಸ್ಥಿತಿಗೆ ಬಹುದೊಡ್ಡದಾಗಿತ್ತು.ಕಲಾವಿಮರ್ಶಕರು,ಪ್ರೇಕ್ಷಕರು ಮತ್ತು ಸಾಮಾಜಿಕರಿಂದ ಕಟುವಿಮರ್ಶೆ,ಅಸಹನೀಯ ಅವಮಾನ,ತಿರಸ್ಕಾರಗಳನ್ನು ಉಂಡರೂ ತನ್ನ ಧ್ಯೇಯ ಮತ್ತು ಹೊಳಹನ್ನು ಗುರುತಿಸಿ,ಅನುಸರಿಸುವ ಹಲವು ಸಂಪನ್ನರನ್ನೂ ಪಡೆಯುವಲ್ಲಿ ವಿಫಲನಾಗಲಿಲ್ಲ.ಈತನಲ್ಲಿ ನೈತಿಕ ಸ್ಥೈರ್ಯ ತುಂಬಿ,ಸ್ಫೂರ್ತಿಪ್ರಚೋದಕನಾದವನು ಅಂದಿನ ಪ್ರಮುಖ ಆಧುನಿಕ ಕವಿ,ವಿಮರ್ಶಕ ಮತ್ತು ಮಾನೆಯ ಗೆಳೆಯ ಚಾರ್ಲ್ಸ್ ಬೋದ್ಲೇರ್.ಈತ ಹೇಳುವಂತೆ - "ಕಲೆ ಎಂಬುದು ನೈಜತೆಯನ್ನು ಬಿಂಬಿಸುವ ಕನ್ನಡಿಯಂತೆ ಕೆಲಸ ಮಾಡಬೇಕು.ಕುಡುಕ,ಭಿಕ್ಷುಕ,ವೇಶ್ಯೆ ಮುಂತಾದ ಸಾಮಾನ್ಯರನ್ನು ಅವರ ನಿಜನೆಲೆಯಲ್ಲಿ ಬಿಚ್ಚಿಡುವ ಮಾಧ್ಯಮವಾಗಬೇಕು".

೧೯ ನೆ ಶತಮಾನ ಯುರೋಪ್ ರಾಷ್ಟ್ರಗಳಲ್ಲಿ ಹಲವು ರೀತಿಯ ಮನೋಮಾರ್ಗಗಳನ್ನು ಸೃಷ್ಟಿಸಿದ ಕಾಲ.ವೈಜ್ನಾನಿಕ ಅನ್ವೇಷಣೆಗಳು,ಸಾಮಾಜಿಕ ಕ್ರಾಂತಿ,ಕೈಗಾರಿಕೋದ್ಯಮದ ಕ್ಷಿಪ್ರಗತಿ -ಈ ಎಲ್ಲಾ ಅಂಶಗಳೂ ಸೃಜನಶೀಲ ಮಾಧ್ಯಮಗಳ ಮೇಲೆ ಮಹತ್ತರ ಪರಿಣಾಮ ಬೀರಿದವು.ರೊಮ್ಯಾಂಟಿಕ್ ಮತ್ತು ಕ್ಲಾಸಿಕಲ್ ಶೈಲಿಯ ಚಿತ್ರಗಳ ಅಪ್ರಸ್ತುತತೆ,ಕೃತಕತೆ ಮತ್ತು ಅಸಂಗತತೆಗಳಿಂದ ಹೊರಬಂದು,ಸುತ್ತಲಿನ ಜನಜೀವನವನ್ನು,ಪ್ರಮುಖವಾಗಿ ತಳವರ್ಗದ ಜೀವನವನ್ನು ಯಾವುದೇ ಮೇಕಪ್ ಇಲ್ಲದೆ ತೆರೆದು ತೋರಿಸುವ ಮೂಲಕ ಚಿತ್ರಮಾಧ್ಯಮ ಹೊದ್ದಿದ್ದ ಮಡಿವಂತಿಕೆಯ ಕೃತ್ರಿಮ ಮುಖವಾಡವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದವು.ರಿಯಲಿಸ್ಂ ಶೈಲಿ ಮತ್ತು ಆ ಶೈಲಿಯ ಪ್ರಮುಖ ಕಲಾವಿದ ’ಗುಸ್ತಾವ್ ಕೂರ್ಬೆ’ಯ ಆಶೋತ್ತರವೂ ಇದೇ ಆಗಿತ್ತು.ಆ ದಿಶೆಯಲ್ಲಿ ಎಡ್ವರ್ಡ್ ಮಾನೆ ಕೂಡ ಪ್ರಾಮಾಣಿಕವಾಗಿ ತೊಡಗಿಕೊಂಡಾತ.

"i paint what i see,and not what others choose to see " -ಅಕಾಡೆಮಿಕ್ ಪಠ್ಯಕ್ರಮದ ಪೂರ್ವಾಗ್ರಹಪೀಡಿತ ಶಿಕ್ಷಣಕ್ಕೆ ವಿರುದ್ಧವಾಗಿ ಮಾನೆ ಹೇಳಿದ ಮಾತಿದು.ಆಲೋಚನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದಾತನಿಂದ ಇಂಥ ಮಾತುಗಳು ಸಹಜವೇ.

ಮಾನೆಯ ಬಹುಪಾಲು ಕಲಾಕೃತಿಗಳಲ್ಲಿ ರೂಪದರ್ಶಿ ’ವಿಕ್ಟೊರೈನ್ ಮ್ಯೂರಂಟ್’ಳನ್ನು ಗುರ್ತಿಸಬಹುದು.ಈಕೆ ಪ್ಯಾರಿಸ್ ನ ಬಡಕುಟುಂಬದವಳು.ಮಾನೆಯ ಗುರು ಥಾಮಸ್ ಕೌಚರ್ ಸೇರಿದಂತೆ ಹಲವು ಕಲಾಬ್ಯಾಸಿಗಳಿಗೆ,ಕಲಾವಿದರಿಗೆ ರೂಪದರ್ಶಿಯಾಗಿದ್ದವಳು,ವೇಶ್ಯಾವೃತ್ತಿಯನ್ನವಲಂಬಿಸಿದ್ದವಳು,ಕೆಲವರ್ಷಗಳಮಟ್ಟಿಗೆ ಮಾನೆಯ ಪ್ರೇಯಸಿಯೂ ಆಗಿದ್ದವಳು.ಈಕೆಯಲ್ಲಿ ಮಾನೆಗೆ ಕಂಡ ವಿಶೇಷತೆಯೆಂದರೆ- ಅಕೃತ್ರಿಮ ಮುಖಚರ್ಯೆ,ಸಹಜತೆ. ಬದುಕಿನ ನೈಜಚಿತ್ರಣವೇ ಮಾನೆಯ ಗುರಿಯೂ ಆಗಿದ್ದರಿಂದ,ಮ್ಯೂರಂಟ್ ಆತನ ನೆಚ್ಚಿನ ರೂಪದರ್ಶಿಯಾಗಿ ಪ್ರಮುಖ ಕಲಾಕೃತಿಗಳ ಮೂಲಕ ಆತನ ಬಂಡಾಯಕ್ಕೆ ಬೆಂಬಲವಾದಳು.’ಒಲಂಪಿಯ’ ಮತ್ತು ’ಲಂಚನ್ ಆನ್ ದ ಗ್ರಾಸ್’ ಕಲಾಕೃತಿಗಳ ಕೇಂದ್ರಬಿಂದುವಾದ ಮಹಿಳೆಯ ಭಾವಕ್ಕೆ ಪೂರಕವಾಗಿ,ರೂಪದರ್ಶಿಯಾಗಿ ನಂತರ ಬಂದ ಕಟುಟೀಕೆ,ನೋವು,ಅವಮಾನಗಳನ್ನು ದಿಟ್ಟೆದೆಯಿಂದ ಸೈರಿಸಿಕೊಂಡವಳು ಈಕೆ.ಆದರ್ಶ ಚೆಲುವೆಯಲ್ಲದ,ಬೀದಿಬೀದಿಗಳಲ್ಲಿ ಕಾಣಸಿಗುವ ಸಾಮಾನ್ಯ ವೇಶ್ಯೆ ಅಥವಾ ಮಹಿಳೆಯನ್ನು ಪ್ರತಿನಿಧಿಸುವ ಸ್ವಾಭಾವಿಕ ಮುಖಭಾವ ಕ್ಯಾನ್ವಾಸ್ ನೊಳಗಿಂದ ಪ್ರೇಕ್ಷಕರನ್ನು ದಿಟ್ಟಿಸತೊಡಗಿದಾಗ ಆಗಿನ ಮಡಿವಂತ ಸಮಾಜ ಆಘಾತವನ್ನನುಭವಿಸಿತ್ತು.

ಆಧುನಿಕ ಸಮಾಜದ ನೈಜಚಿತ್ರಣಕ್ಕೆ ಮಾಧ್ಯಮವಾಗಿ ಆತ ಆರಿಸಿಕೊಂಡದ್ದು ವೇಶ್ಯೆಯನ್ನು !
ಬಹುಷಃ ಪುರುಷರ/ಪುರುಷಪ್ರಧಾನ ಸಮಾಜದ ಸೋಗಲಾಡಿತನವನ್ನು ಬಿಂಬಿಸುವ ಪರಮ ಪ್ರತಿಮಾರೂಪಕ ಇದು.ಲೈಂಗಿಕತೆಯಿಂದಾಚೆಗೂ ಸಾಂಕೇತಿಕ ವಿಸ್ತರಣೆ ಈ ರೂಪಕಕ್ಕೆ ಇರಬಹುದು.

ರೊಮ್ಯಾಂಟಿಕ್,ಕ್ಲಾಸಿಕಲ್ ಚಿತ್ರಗಳೇ ಪರಮಶ್ರೇಷ್ಠ ಎಂಬಂತೆ ಪರಿಗಣಿತವಾಗಿದ್ದ ಆ ದಿನಗಳಲ್ಲಿ ಚಿತ್ರಮಾಧ್ಯಮ ಕೇವಲ ಪುರಾಣ,ಮಹಾಕಾವ್ಯಗಳ ಉನ್ನತ ಮೌಲ್ಯಗಳನ್ನು ಮಾತ್ರ ಬಿಂಬಿಸುವ ಹೊಣೆಹೊತ್ತಂತೆ ಭಾವಿಸಲ್ಪಟ್ಟಿತ್ತು.ನಗ್ನಚಿತ್ರಗಳು ದೈವಿಕ ಔನ್ನತ್ಯದ ಸೋಗಿನಲ್ಲಿ ಪ್ರದರ್ಶಿತವಾಗುತಿದ್ದ ಸಂದರ್ಭ.ಇಂಥ ಮನಸ್ಥಿತಿಗೆ ಸಂಪೂರ್ಣ ವಿರುದ್ಧವಾಗಿ,ಮಾನೆ ನಿಜಜೀವನದ ವೇಶ್ಯೆಯನ್ನು ಕಲಾಮಾಧ್ಯಮದ ಮೂಲಕ ದೇವತೆಯಂತೆ ಚಿತ್ರಿಸಿದ್ದು ಸಹಜವಾಗಿಯೇ ಸಂಪ್ರದಾಯಶರಣರಿಗೆ ಕೊಟ್ಟ ಬಹುದೊಡ್ಡ ಪೆಟ್ಟಾಗಿತ್ತು.

’ಲಂಚನ್ ಆನ್ ದ ಗ್ರಾಸ್’ -ವಿಚಿತ್ರ ದಿಟ್ಟತನ,ಸ್ಫೂರ್ತಿ ಮತ್ತು ಮಹಿಳೆಯ ಸಾಮಾಜಿಕ ಪ್ರಾತಿನಿಧ್ಯವನ್ನು ಬಿಂಬಿಸುತ್ತದೆ.ಈ ಕಾರಣಗಳಿಂದಾಗಿಯೇ ಮಡಿವಂತ,ಸಭ್ಯಸೋಗಿನ ಸಮಾಜ ಬೆತ್ತಲೆಗೊಂಡು ಅವಮಾನಿತವಾದಂತೆ ತತ್ತರಿಸಿತು,ಚೀರಾಡಿತು.ಸ್ತ್ರೀ ನಗ್ನತೆಯನ್ನು ಪೌರಾಣಿಕ ಪುಣ್ಯಕಥೆಗಳ ವೇಷದಲ್ಲಿ ಪ್ರದರ್ಶಿಸುವ ಶಾಸ್ತ್ರೀಯ ಶೈಲಿಯ ಸೋಗಲಾಡಿತನವನ್ನು ಬಯಲಿಗೆಳೆಯುವಂತೆ,ಸತ್ಯದ ಎದೆಬಗೆದು ಕನ್ನಡಿ ಹಿಡಿಯವಂತೆ ದೃಶ್ಯಮಾಧ್ಯಮದ ಅಲೌಕಿಕ ಶಕ್ತಿಯನ್ನು ಲೌಕಿಕ ಸತ್ಯದ ಆವರಣದಲ್ಲೇ ಸೆರೆಹಿಡಿಯುವ ’ಆಧುನಿಕ’ ದೃಷ್ಟಿಗೆ ಮಾನೆ ಚಾಲನೆ ನೀಡಿದ.

ಇಬ್ಬರು ಆಧುನಿಕ ಉಡುಗೆಯ ಪುರುಷರ ನಡುವೆ ನಗ್ನವಾಗಿ ಕುಳಿತ ಮಹಿಳೆ ನೇರವಾಗಿ ಪ್ರೇಕ್ಷಕನಣ್ಣನ್ನೇ ದಿಟ್ಟಿಸುತ್ತಾ,ಚಿತ್ರದ ಆವರಣದೊಳಗೆ ಆಹ್ವಾನಿಸುತ್ತಾ ಕಲಾಮಾಧ್ಯಮದ ಚತುರ ಮಡಿವಂತಿಕೆಗೆ ಚ್ಯುತಿಯುಂಟುಮಾಡಿದ್ದು ಅಕ್ಷಮ್ಯವಾಗಿತ್ತು.ಸಂಪ್ರದಾಯದ ಸುರಕ್ಷಿತ ಆವರಣದೊಳಗೆ ನಗ್ನತೆಯನ್ನು ಒಪ್ಪಿಕೊಳ್ಳುವ ಸಮಾಜ,ಅದೇ ನಗ್ನತೆಯನ್ನು ನಿಜಜೀವನದ ಪ್ರತಿಬಿಂಬದಂತೆ ತೋರಿದಾಗ ಹೌಹಾರುತ್ತದೆ.ಕಲಾಮಾಧ್ಯಮ ಕೇವಲ ’ಉನ್ನತ’ಭಾವನೆಗಳನ್ನು ಉದ್ದೀಪಿಸುವ,ಕಾಲ್ಪನಿಕ ಆದರ್ಶಗಳನ್ನು ಬಿಂಬಿಸುವ ಮಾಧ್ಯಮ ಎಂಬ ಸ್ಥಿರನಂಬಿಕೆಯೇ ಇದಕ್ಕೆ ಕಾರಣ.

ಕಲಾಚರಿತ್ರೆಯನ್ನು ಅವಲೋಕಿಸಿದಾಗ,ಮಹಿಳೆ ಕೇವಲ ರೂಪದರ್ಶಿಯಾಗಿ, ಸೌಂದರ್ಯದ ಪ್ರತೀಕವಾಗಿ,ಆದರ್ಶ ಭೋಗಜೀವನದ ಸಂಕೇತವಾಗಿ ಮಾತ್ರ ಕಾಣುತ್ತಾಳೆ.ಇದು ಪುರುಷ ದೃಷ್ಟಿಯನ್ನು ತಣಿಸುವುದಕ್ಕಾಗಿಯೇ,ಪುರುಷರಿಂದಲೇ ಸೃಷ್ಟಿಗೊಂಡಿದ್ದನ್ನು ಕಾಣಬಹುದು.ಕಲಾಚರಿತ್ರೆಯುದ್ದಕ್ಕೂ ಕೇವಲ ಬೆರಳೆಣಿಕೆಯ ಸ್ತ್ರೀಕಲಾವಿದರನ್ನು ಹೊಂದಿರುವ ಚಿತ್ರಮಾಧ್ಯಮ ಒಟ್ಟಾರೆಯಾಗಿ ಪುರುಷಸಂವೇದನೆಯ ಕಪಿಮುಷ್ಟಿಯಲ್ಲಿದ್ದುದರಲ್ಲಿ ಆಶ್ಚರ್ಯವೇನಿಲ್ಲ.ಮಾನೆಯ ಚಿತ್ರಗಳು ಮೇಲ್ನೋಟಕ್ಕೆ ಸ್ತ್ರೀನಗ್ನತೆಯನ್ನು ಹಸಿಗೊಳಿಸುವಂತೆ ಕಂಡರೂ,ವಾಸ್ತವಿಕವಾಗಿ ಸಾಮಾಜಿಕ ಮತ್ತು ಶಾಸ್ತ್ರೀಯ ನಿಬಂಧನೆಗಳ ಮೂಲಕ ನಗ್ನತೆಯನ್ನು ಸಭ್ಯಸೋಗಿನಲ್ಲಿ ಆಸ್ವಾದಿಸುವ,ಕಾಲ್ಪನಿಕ ಆದರ್ಶಗಳನ್ನೇ ನಿಜಗೊಳಿಸುವ ಹುನ್ನಾರದ ನಂಬಿಕೆಗಳನ್ನು ತೀವ್ರವಾಗಿ ವಿರೋಧಿಸುವ ಉದ್ದೇಶದ್ದಾಗಿತ್ತು ಎನ್ನಬಹುದು.

’ಲಂಚನ್ ಆನ್ ದ ಗ್ರಾಸ್’- ಕ್ರಿ.ಶ ೧೮೬೩ ರಲ್ಲಿ ಪ್ಯಾರಿಸ್ ನ ಸಲಾನ್ ನಿಂದ ತಿರಸ್ಕರಿಸಲ್ಪಟ್ಟು,ಪರ್ಯಾಯ ಪ್ರದರ್ಶನದಲ್ಲಿ ಪ್ರದರ್ಶಿಸಲ್ಪಟ್ಟಾಗ ದೊಡ್ಡ ಕಂಪನ ಸೃಷ್ಟಿಸಿತ್ತು.ಇಬ್ಬರು ಆಧುನಿಕ ಪುರುಷರೊಂದಿಗೆ ಕುಳಿತ ನಗ್ನ ಮಹಿಳೆ ಪ್ರೇಕ್ಷಕನೆಡೆಗೆ ದೃಷ್ಟಿ ಹಾಯಿಸುತ್ತಿರುವಂತೆ ತೋರಿಸಲಾಗಿದೆ.ಇಬ್ಬರೂ ಪುರುಷರು ಮಾತಿನಲ್ಲಿ ಮಗ್ನರಾಗಿದ್ದಾರೆ.ಎದುರು ಕುಳಿತ ಮಹಿಳೆ ತನ್ನ ಸಹಚರರೊಂದಿಗೆ ಯಾವುದೇ ಸಂಬಂಧವಿಲ್ಲವೆಂಬಂತೆ ಪ್ರೇಕ್ಷಕನನ್ನು frame ನೊಳಗೆ ಆಹ್ವಾನಿಸುವ ಪ್ರಯತ್ನದಲ್ಲಿದ್ದಾಳೆ.ನಾಲ್ವರ ದೃಷ್ಟಿಯೂ ಪರಸ್ಪರ ಸಂಧಿಸುತ್ತಿಲ್ಲ.ಆದರೆ ಅವರು ಪ್ರೇಕ್ಷಕನ ಇರವನ್ನು ಗಾಢವಾಗಿ ಅನುಭವಿಸುತ್ತಾ,ಆತನ ಬರುವಿಗಾಗಿ ಅವಕಾಶ(space) ಕೊಡಲು ಸಿದ್ಧರಿದ್ದಂತಿದೆ.

ಚಿತ್ರದ ಎಡಮುಂಭಾಗದಲ್ಲಿ ಬುಟ್ಟಿ ಮಗುಚಿರುವಂತೆಯೂ,ಹಣ್ಣುಗಳು ಹರಡಿ ಬಿದ್ದಂತೆಯೂ ಚಿತ್ರಿಸಲಾಗಿದೆ.ಮಗುಚಿದ ಬುಟ್ಟಿ ಕಳೆದುಹೋದ ಮುಗ್ಧತೆಯ ಸಂಕೇತವಾಗಿಯೂ,ಖಾಲಿ ಕಪ್ಪೆಚಿಪ್ಪು ಕಾಮೋದ್ದೀಪನದ ಸಂಕೇತವಾಗಿಯೂ ಚಿತ್ರಿತವಾಗಿದೆ.ಬುಟ್ಟಿಯ ಎದುರುಗಡೆ ಚಿತ್ರಿಸಲಾಗಿರುವ ಕಪ್ಪೆ ಫ಼್ರೆಂಚ್ ಭಾಷೆಯಲ್ಲಿ ವೇಶ್ಯೆಗಿರುವ ಅಡ್ಡಹೆಸರನ್ನು ಸೂಚಿಸುತ್ತದೆ.ಮಹಿಳೆಯ ಮುಂದೆ ಕುಳಿತ ಪುರುಷನು ಆಕೆಯೆಡೆಗೆ ಬೆಟ್ಟುಮಾಡಿ ಮಾತನಾಡುತ್ತಿರುವುದು ಮತ್ತು ಆಕೆ ಪ್ರೇಕ್ಷಕನೆಡೆಗೆ ನೇರವಾಗಿ ದಿಟ್ಟಿಸುತ್ತಿರುವುದು- ಇಡೀ ಚಿತ್ರದ ಕೇಂದ್ರಬಿಂದು ಆಕೆಯೇ ಎಂಬುದನ್ನು ದೃಢಗೊಳಿಸುತ್ತದೆ.

’ಲಂಚನ್ ಆನ್ ದ ಗ್ರಾಸ್’ ಮೂಲತಃ ಪುನರುಜ್ಜೀವನ ಯುಗದ ಮರ್ಸಾಂಬಿನೋ ರೈಮಂಡಿ ಎಂಬ ಕಲಾವಿದನಿಂದ ರಚಿತವಾದ ’judgement of paris’ ನಲ್ಲಿ ಕಂಡುಬರುವ ನಗ್ನದೇವತೆಗಳ ಆಧುನಿಕ ಅವತರಣಿಕೆ.ಕುಳಿತಿರುವ ಭಂಗಿಯನ್ನು ಬದಲಿಸದೆ,ಅದೇ ದೃಶ್ಯವನ್ನು ಆಧುನೀಕರಣಗೊಳಿಸಿದ್ದಾನೆ ಮಾನೆ.ಮತ್ತೊಂದು ಬಹುಮುಖ್ಯ ಹೊಸತನವೆಂದರೆ- ಚಿತ್ರಣಶೈಲಿಯ ಕಚ್ಚಾತನ.ಶಾಸ್ತ್ರೀಯ ಚಿತ್ರಗಳಲ್ಲಿರುವಂತೆ ಶುಧ್ಧರೂಪಣದ (neat finishing) ಪ್ರಯತ್ನ ಇಲ್ಲಿಲ್ಲ.ಬದಲಾಗಿ ಅವು ದಿಟ್ಟ ಮತ್ತು ವಿಶ್ವಾಸದ ಬೀಸುಗಳು.ಒಟ್ಟಾರೆ,ವಿಷಯ ಮತ್ತು ಶೈಲಿ ಎರಡರಲ್ಲೂ ಹೊಸತನದ ವಲಯ ಸೃಷ್ಟಿಗೊಂಡಿದ್ದನ್ನು ಕಾಣಬಹುದು.


ಮಾನೆಯ ಒಟ್ಟಾರೆ ಚಿತ್ರಗಳನ್ನು ಅವಲೋಕಿಸಿದಾಗ ಆತನ ಅದ್ಭುತ ಕೌಶಲ್ಯ ಕಣ್ಣಿಗೆ ಕಟ್ಟುತ್ತದೆ.ಯಾವುದೇ ಚಿತ್ರವೂ ಆತನ ಹೊಸತನದ ಹುಡುಕಾಟದ ಮಾಧ್ಯಮಗಳಾಗಿ,ಕ್ಯಾನ್ವಾಸ್ ಮೇಲೆ ಕಡೆದ ಶಿಲ್ಪದಂತೆ ಗಾಢ ಅನುಭವಕೊಡುವ ರೂಪಗಳಾಗಿ ಅರಳಿವೆ.ಬಣ್ಣ ಮತ್ತು ಕುಂಚದ ನಿರ್ವಹಣೆ ಬಹಳ ದಿಟ್ಟವಾಗಿ,ಹೊಸರೂಪದೊದಿಗೆ ದಟ್ಟೈಸುತ್ತವೆ.ನಿತ್ಯಜೀವನದ ನೈಜತೆಯನ್ನು ಬಿಂಬಿಸುವುದರ ಮೂಲಕ ಚಿತ್ರಮಾಧ್ಯಮವನ್ನು 'ಆಕಾಶ'ದಿಂದ 'ಭೂಮಿ'ಗೆ ಇಳಿಸುವ ಪ್ರಯತ್ನ ಇದು.ಜನಸಾಮಾನ್ಯರೆಡೆಗೆ ಕಲಾಪ್ರಪಂಚ ಹೊರಳಿನೋಡುವಂತೆ ಮಾಡಿದ ಮಾನೆ ೧೯ ನೆ ಶತಮಾನದ ಅತಿವಿಶಿಷ್ಟ ಮತ್ತು ಪ್ರಮುಖ ಕಲಾಶೈಲಿ -’ಇಂಪ್ರೆಶನಿಸಂ’(ಕ್ಷಣಬಿಂಬವಾದ) ಹುಟ್ಟಿಗೆ ಪ್ರೇರಕಶಕ್ತಿಯಾದರೂ ತನ್ನನ್ನು ತಾನು ಎಂದಿಗೂ ’ಇಂಪ್ರೆಶನಿಸಂ’ನ ಸೀಮಿತ ಲಕ್ಷಣಗಳೊಂದಿಗೆ ಗುರ್ತಿಸಿಕೊಳ್ಳಲು ಬಯಸಲಿಲ್ಲ.

Monday, November 17, 2008

ರೆಡ್ ವೈನ್ ರಾದ್ಧಾಂತ

'Drinking : occasionally'..

ಪ್ರೊಫ಼ೈಲ್ ನಲ್ಲಿದ್ದ ಈ ಸಾಲು ಅಷ್ಟೊಂದು ಮುಖ್ಯ ಅಂತ ಅನಿಸಿರಲಿಲ್ಲ.ಇಷ್ಟೊಂದು ಪ್ರಶ್ನೆಗಳನ್ನು ಹುಟ್ಟುಹಾಕಬಹುದು ಅಂತಾನೂ ಊಹಿಸಿರಲಿಲ್ಲ.ಕೊಡಗಿನ ಮಾಮನ ಮನೆಯ ಗೌಜಿಯಲ್ಲಿ ಯಾವತ್ತೋ ಸ್ವಲ್ಪ ಗುಟುಕರಿಸಿದ್ದ ವೈನ್ ತುಂಬ ಇಷ್ಟ ಆಗಿತ್ತು.ಮನೆಗೆ ವಾಪಸಾದ ಮೇಲೂ ಹಟ ಮಾಡಿ ’ಗೋಲ್ಕೊಂಡ ರೆಡ್ ವೈನ್’ ತರಿಸಿದ್ದೆ.ಅದರ ಸಣ್ಣ,ಉದ್ದನೆ ಕುತ್ತಿಗೆಯ ಬಾಟಲ್ ಕೂಡ ಮುದ್ದಾಗಿತ್ತು.ಅಪ್ಪನ ಮಂಗಳೂರಿನ ಗೆಳೆಯರೊಬ್ಬರು ಇದರ ಔಷಧೀಯ ಗುಣಗಳ ಪಟ್ಟಿಮಾಡಿದ ಮೇಲಂತೂ ಅಧಿಕೃತವಾಗಿ ಪರವಾನಗಿ ಸಿಕ್ಕಂತಾಗಿತ್ತು!ನಾಲಗೆಗೆ ಸಂಪೂರ್ಣ ಜೀವ ಎರೆದುಬಿಡುವ ಅದರ ರುಚಿ ಮತ್ತು ಗಾಢ ಮೋಹಕ ಬಣ್ಣ ಅಧ್ಬುತ ಎನಿಸಿತ್ತು! ಆದರೆ ಯಾವತ್ತೂ ನಿಶೆ ಏರಿಸುವ ಮಟ್ಟಿಗೆ ಅದರ ಸಹವಾಸ ಮಾಡಿರಲಿಲ್ಲವಷ್ಟೆ.

ಹೊಸಪರಿಚಯದ ಆತ ಕೇಳುತ್ತಿದ್ದ..: "ನಿಜಾನ,..?! ನೀನ್ ಕುಡೀತೀಯಾ..?!" ಮಹಾಪರಾಧದ ಪರಮಾವಧಿಯ ಬಗ್ಗೆ ಎಚ್ಚರಿಸುವ ಧಾಟಿಯಲ್ಲಿತ್ತು ಆತನ ಧ್ವನಿ.ತಕ್ಷಣಕ್ಕೆ ಮುಜುಗರ ಎನಿಸಿದರೂ ಪೂರ್ವಾಗ್ರಹದ ಕುರುಡು ಪ್ರಶ್ನೆಯಂತೆ ಕೇಳಿಸಿದ್ದರಿಂದ ಸಣ್ಣ ಸಿಟ್ಟು ಬಂತು.ಆದರೆ ಅದು ಆತನ ಸ್ವಂತ ಪ್ರಶ್ನೆ ಅನಿಸದೆ,ಇಡೀ ವ್ಯವಸ್ಥೆಯ ಪೂರ್ವನಿಯೋಜಿತ ಪರೀಕ್ಷೆಯ ಉರುಹೊಡೆದ ಪದಗಳಂತೆ ಕೇಳಿಸಿ ಅವನ ಬಗ್ಗೆ ಕೊಂಚ ಕರುಣೆಯೂ ಮೂಡಿತ್ತು.

ಹುಡುಗಿಯರನ್ನು ಬಲವಂತದ ಕಟ್ಟುಪಾಡುಗಳ ಚೌಕಟ್ಟಿನ ಒಳಗೇ ನೋಡಲಿಚ್ಛಿಸುವ ಸಮೂಹ ಸನ್ನಿಯಂಥ ಮನಸ್ಥಿತಿಗಿಂತ ಅಸಹ್ಯವಾದುದು ಬೇರೆ ಏನಿರಲು ಸಾಧ್ಯ..?!
ಹಾಗೆಯೇ ಆಧುನಿಕರೆನಿಸಿಕೊಳ್ಳುವ ಧಿಮಾಕಿನ ಅವಸರದಲ್ಲಿ ಕುಡಿತ,ಧೂಮಪಾನದ ಚಟ ಹತ್ತಿಸಿಕೊಳ್ಳುವ ಹುಡುಗಿಯರ ತರ್ಕವೂ ಅಷ್ಟೇ ಅಸಂಬದ್ಧ.

ತನ್ನಷ್ಟಕ್ಕೆ ತಾನಿರುವ,ಅಷ್ಟೊಂದು ಮುದ್ದಾದ ’ರೆಡ್ ವೈನ್’ ಗೆ ಕ್ರಿಮಿನಲ್ ಪಟ್ಟ ಕಟ್ಟುವುದು ಯಾವತ್ತೂ ನನಗಿಷ್ಟವಿಲ್ಲದ ವಿಷಯ!

’chat box’ ಅಲ್ಲಿ ಅವನ ಪ್ರಶ್ನೆ ಹಾಗೇ ಇತ್ತು.ಇದು ಹೊಸದೇನಲ್ಲವಾದ್ದರಿಂದ,ಯಾಕೋ ತಮಾಷೆಯ ಪರಿಧಿಯೊಳಗೆ ಎಳೆಯಬಹುದಾದ ವಿಷಯದಂತೆಯೂ ಇರದಿದ್ದರಿಂದ ನನ್ನನ್ನು ನಾನು ಸಮರ್ಥಿಸಿಕೊಳ್ಳುವ ಯಾವುದೇ ಧಾವಂತ ಇಲ್ಲದೆ ತಣ್ಣಗೆ ಹೇಳಿದೆ..:"ನನ್ನ ಒಳ್ಳೆಯತನ,ಕೆಟ್ಟತನ,ಸಂಕೋಚ,ಹುಚ್ಚು,ಮೊಂಡಾಟ,ಸಿಟ್ಟು...ಎಲ್ಲವನ್ನೂ ಸರಿಯಾಗಿ ತಿಳಿಯಬಲ್ಲ ಗೆಳೆಯರು ನಿಜಕ್ಕೂ ಸಂಭ್ರಮ ಹುಟ್ಟಿಸುತ್ತಾರೆ.ಹೊಗಳುಭಟ್ಟರಂತೆ ಸದಾ ಗುಣಗಾನ ಮಾಡುವವರು ಅಥವಾ ಸೀಮಿತ ಚೌಕಟ್ಟಿನ ಬಣ್ಣದ ಕನ್ನಡಕದ ಮೂಲಕ ನೋಡುವವರು ಬರೀ ಬೋರ್ ಹೊಡೆಸಬಹುದು ಅಷ್ಟೆ.ಹಾಗೇ ತಮ್ಮನ್ನು ತಾವು ಸರ್ವಗುಣಸಂಪನ್ನರಂತೆ ಬಿಂಬಿಸುತ್ತಾ ಶ್ರೀಮದ್ಗಾಂಭೀರ್ಯ ಧರಿಸಿ,ಪದ್ಮಾಸನದಲ್ಲಿ ನೇರ ಸೊಂಟ ಇಟ್ಟು ಬಾಯಿಪಾಠ ಒಪ್ಪಿಸುವವರೂ ನಗು ತರಿಸುತ್ತಾರೆ..."

ಪ್ರೊಫ಼ೈಲ್ ಕಾಲಂ ತುಂಬುವಾಗ ಅದೆಷ್ಟು ಜನರು ತಡವರಿಸಿರಬಹುದು; ಎಂತೆಂಥ ಸೋಗು ಹಾಕಿರಬಹುದು ಎಂದು ನೆನೆದು ನಗು ಉಕ್ಕಿ ಬಂತು. ಯಾವುದನ್ನೂ ಸ್ವಂತದ್ದು ಎನಿಸಲು ಆಸ್ಪದ ಕೊಡದ ಈ ವ್ಯವಸ್ಥೆಯ ಮಾರಣಾಂತಿಕ ಬಿಗಿತದ ಬಗ್ಗೆ ವಿಷಾದವೆನಿಸಿತು.

ಅವನ ಪುನರಾವರ್ತಿತ ಪ್ರಶ್ನೆಗಳಿಗೆ ಉತ್ತರವೆಂಬಂತೆ ಒಂದು 'clear smile' ರವಾನಿಸಿ,ಪ್ರಶ್ನೆ ಕೇಳಿದ್ದರ ಬಗ್ಗೆ ಆತನಲ್ಲಿ ಮೂಡಿರಬಹುದಾದ ಸಣ್ಣ ಅಳುಕನ್ನು ಹಾಗೇ ಇರಲು ಬಿಟ್ಟು, ಲಾಗ್ಔಟ್ ಮಾಡಿ ಸುಮ್ಮನೆ ಕುಳಿತೆ...

Tuesday, November 11, 2008

ತನ್ನರಿವು ತನಗೀವ ತಾವು


ಎಲ್ಲೆಲ್ಲೋ ಕಳೆದುಹೋಗಿಬಿಡುತ್ತಿರುವಂತೆ ಅನಿಸಿದಾಗೆಲ್ಲ ಚೆಲ್ಲಿಹೋದ ಎಲ್ಲವನ್ನೂ ಹೆಕ್ಕಿ,ಇಡಿಯಾಗಿ ಮತ್ತೆ ವಾಸ್ತವಕ್ಕೆ ಎಳೆದು ತರುವುದು ಬರವಣಿಗೆ ಮತ್ತು ಚಿತ್ರಗಳ ಪ್ರಾಮಾಣಿಕ ಮೌನ.ಇದನ್ನೂ ’ವಾಸ್ತವ’ ಎನ್ನುವುದು ಹೇಗೆ..? ಕಲ್ಪನೆ ಮತ್ತು ವಾಸ್ತವಕ್ಕೆ ನನ್ನ ಮಟ್ಟಿಗೆ ಹೆಚ್ಚು ವ್ಯತ್ಯಾಸವೇನೂ ಕಾಣುತ್ತಿಲ್ಲ.ವಾಸ್ತವಿಕತೆಯೆಂಬುದು ನಮ್ಮ ನಮ್ಮ ದೃಷ್ಟಿ ಚಾಚಬಲ್ಲಷ್ಟು ಕಾಲ್ಪನಿಕ ಪರಿಧಿಯೊಳಗೆ ಮಾತ್ರ ಎಂಬುದು ನಿಜವಷ್ಟೆ.

ಬಸ್,ಟ್ರ್ಯಾಫ಼ಿಕ್,ಮಾರ್ಕೆಟ್,ಥಿಯೇಟರ್...ಎಲ್ಲದರ ಬಣ್ಣ,ವಾಸನೆ,ಸದ್ದು,ಸ್ಪರ್ಶ ಸಿಕ್ಕಷ್ಟೂ ದೂರ ಛಿದ್ರವಾಗಿ ಹರಡಿಹೋಗಿರುತ್ತೇನೆ.ಬಸ್ ಇಳಿದು ರಸ್ತೆ ನಡೆಯುವಾಗ ಕಂಡ ಕಾರು,ಸೈಕಲ್,ಜನ ಅಲ್ಲಷ್ಟು,ಇಲ್ಲಷ್ಟು ಉಳಿದು ಮತ್ತೆ ಇಡಿಯಾಗಿ ಮನೆ ಹೊಕ್ಕರೆ ಪುನಃ ಹಂಚಿಕೊಂಡುಬಿಡುವ ಗೋಡೆಯ ಚಿತ್ರ,ಕುರ್ಚಿ ಸಂಸಾರ,ಚಪ್ಪಲಿ ಗೂಡು,ಸ್ವೆಟರ್ ಬಣ್ಣ,ಬೆಡ್ ಶೀಟ್ ಅಂಚಿನ ಡಿಸೈನ್,ದುಪಟ್ಟ,..ಕಡೆಗೆ ನನ್ನ ಕಣ್ಕಪ್ಪು,ಯಾರ್ಡ್ಲಿ ಪರ್ಫ಼್ಯೂಂ...ನನ್ನನ್ನು ಹೀಗೀಗೇ ಇಂತಿಷ್ಟೇ ಎಂದು ಪರಿಚಯಿಸಿಕೊಳ್ಳುವುದು ಹೇಗೆ..?!

ನೋಡಿದ ನೋಟ,ಆಡಿದ ಮಾತು,ತಡವಿದ ರಾಗ ಅಲೆಯಾಗಿ ಎಲ್ಲೆಲ್ಲಿ ಸುತ್ತಿ,ಬಳಸಿ,ಸುಳಿದು ಹರಡಿದೆಯೋ ಅಲ್ಲೆಲ್ಲ ನಾನೇ.
ಅಂದಮೇಲೆ ’ಏಕಾಂಗಿ’ ಅಂತೇನಾದರು ಅನಿಸಿದರೆ ನೆಪ ಹುಡುಕುವ ನನ್ನ ಬಗ್ಗೆ ನನಗೇ ನಗು ಬಂದೀತು.

ಮೊನ್ನೆ ಥಿಯೇಟರ್ನಲ್ಲಿ ’ಫ಼್ಯಾಶನ್’ ನೋಡಿದ ಮೇಲೆ ಹೀಗೆ...ಕಳೆದದ್ದು,ಪಡೆದದ್ದು ಎಲ್ಲ ಗಿರಕಿ ಹೊಡೆಯುತ್ತಾ ’ನಾನು’ ಎಂಬ ಒಟ್ಟು ಮೊತ್ತದ ಅಂದಾಜು ಹಾಕಲು ಹೊರಟುಬಿಟ್ಟಿದೆ ನನ್ನೊಳಗಿನ ನಾನು..!

ಬಾಲಿವುಡ್ ಮಂದಿ ಕೆಲವೊಮ್ಮೆ ಹೀಗೆ ಆಶ್ಚ್ಚರ್ಯ ಹುಟ್ಟಿಸುವಂತೆ ನನ್ನನ್ನು ಕಾಡಿಬಿಡುತ್ತಾರಲ್ಲ ಎಂಬುದೇ ಒಗಟು ಈಗ !
ನೀಟಾದ,ಅಚ್ಚುಕಟ್ಟಾದ ಸೌಂದರ್ಯದ ಬಗ್ಗೆ ಯಾಕೋ ತಾತ್ಸಾರ.’ಸುಂದರ’ ಎನಿಸಿಕೊಳ್ಳುವ ಮುಖಗಳೆಲ್ಲ ಒಂದೇ ಅಚ್ಚಿನ ಎರಕಗಳಂತೆ ಕಂಡು ಕೊನೆಗೆ ಕೃತ್ರಿಮ ಮುಖವಾಡಗಳಾಗಿ ಕಣ್ಣಿಗಷ್ಟೆ ರಾಚಿ ಮರೆಯಾಗಿಬಿಡುತ್ತವೆ.

ರಾಣಿಮುಖರ್ಜಿಯ ಅಳು,ಶಾರುಖ್ ನ ನೋಟ,ಆಮಿರ್ ನ ಸಿಟ್ಟು,ಕಾಜೋಲಳ ತುಂಟತನ...ಇವೆಲ್ಲವುಗಳ ಆವಾಹನೆಯ ಅವರ ಸಾಮರ್ಥ್ಯ ಮಾತ್ರ ಗಣನೆಯಲ್ಲಿ ನಿಂತು, ಬಾಲಿವುಡ್ ಎಂಬ ಬಹುಚರ್ಚಿತ ವಲಯದ ಬೆಡಗು ತಲೆತಿರುಗಿಸುವ ತೀಕ್ಷ್ಣ ಅತ್ತರಿನಂತೆ ಅಡರಿ ನನ್ನನ್ನು ಮತ್ತಷ್ಟು ಅರಸಿಕತೆಗೆ ತಳ್ಳುವುದುಂಟು.

ಹೆಚ್ಚು ಜನಪ್ರಿಯಗೊಂಡ ಯಾವುದೇ ’ಬ್ರ್ಯಾಂಡ್’ ನನ್ನಲ್ಲಿ ಅಷ್ಟೇ ಸಂದೇಹ ಮತ್ತು ಭಯ ಹುಟ್ಟಿಸುತ್ತದೆ.ಜನಪ್ರಿಯತೆಯ ಅಬ್ಬರದಲ್ಲಿ ಕಳೆದು ಹೋಗುತ್ತಾ ನಮ್ಮನ್ನೇ ನಾವು ಮರೆತುಬಿಡುವ ಅಪಾಯದಿಂದ ಸದಾ ಹಿಂದೆಸರಿಯುತ್ತ ಪೆಪ್ಸಿ,ಲ್ಯಾಕ್ಮೆ,ಲಕ್ಸ್ ...ಎಲ್ಲವುಗಳಿಂದ ಸಾಕಷ್ಟು ದೂರವಿದ್ದುಬಿಡುವುದು ನನ್ನಮಟ್ಟಿಗೆ ಸಮಾಧಾನದ ವಿಷಯ.ಕಿವಿಗಡಚಿಕ್ಕುವ ಇವೆಲ್ಲದರ ಸಡಗರದ ಗದ್ದಲ ನಿಧಾನವಾಗಿ ನಮ್ಮ ಎಲ್ಲವನ್ನೂ ಆವರಿಸುತ್ತ ಅತಿಸಹಜವೆಂಬಂತೆ ತನ್ನ ಅಗಾಧ ಭದ್ರಬಾಹುಗಳಿಂದ ಬರಸೆಳೆದು ಪ್ರೀತಿಯ ಭ್ರಮೆ ಬರುವಂತೆ ಗಟ್ಟಿಯಾಗಿ ಅಪ್ಪುತ್ತಾ ಉಸಿರುಗಟ್ಟಿಸಿಬಿಡುವ ಮುನ್ನ ಸರಿಯಾದ ದೂರಕಾಯ್ದುಕೊಂಡುಬಿಡಲು ಹೆಣಗುತ್ತಿರುತ್ತೇನೆ.
ಇವನ್ನೆಲ್ಲ ತಮಾಷೆಯ,ಕೇವಲ ಮರಂಜನೆಯ ವಸ್ತುಗಳಷ್ಟೆ ಎಂದು ನಂಬಿ,ನಿಟ್ಟುಸಿರುಬಿಟ್ಟು ಹಗುರಾಗಿಬಿಡುವಹಾಗಿದ್ದರೆ ಚೆನ್ನಾಗಿತ್ತೇನೋ! ಆದರೆ ಇದು ಅಷ್ಟು ಸುಲಭ ಇರುವಂತೆ ಕಾಣುತ್ತಿಲ್ಲ.ನಮ್ಮ ದೃಷ್ಟಿ,ಗ್ರಹಿಕೆ..ಕಡೆಗೆ ವ್ಯಕ್ತಿತ್ವವನ್ನೂ ಖರೀದಿಸಿಬಿಡುವ ರಾಕ್ಷಸ ಶಕ್ತಿ ಜನಪ್ರಿಯತೆಯ ಲೇಬಲ್ ಗೆ ಇರುತ್ತದೆ !

ಈ ಎಲ್ಲಾ ತಾಕಲಾಟಗಳನ್ನು ಕೆಲಹೊತ್ತು ಪಕ್ಕಕ್ಕೆ ಸರಿಸಿ,ನಿರಾಳವಾಗಿ ಮಧುರ್ ಭಂಡಾರ್ಕರ್ ನ ’ಫ಼್ಯಾಶನ್’ನೋಡಲು ಹೋದೆ.ಜನಪ್ರಿಯ ದೃಷ್ಟಿಯಲ್ಲಿ ’ಸೌಂದರ್ಯ’ದ ಅಳತೆಗೋಲು ಹಿಡಿದು ನೋಡಿದರೆ ಆತ ಕೂಡ ಸುಂದರಾಂಗನೇ.
ಸ್ವಲ್ಪ ಕೂಡ 'ವಕ್ರತೆ' ಇಲ್ಲದ ಅವನಿಂದ ಎಂಥ ಸಿನಿಮಾ ಬಂದಿರಬಹುದು ಎಂಬ ಸಣ್ಣ ಕುಹಕದ ತರ್ಕ ಬಂದು ಹೋಯ್ತು.ನಂತರ ಯಾಕೋ ಕೇಡೆನಿಸಿ,ಆತನ ಬಗ್ಗೆ ಕನಿಕರ ಮೂಡಿದಂತಾಗಿ ಮಾತಿನ ಮಥನಕ್ಕೆ ವಿರಾಮ ಕೊಟ್ಟು ಸಿನಿಮಾ ಮೊರೆಹೋದೆ.

ತನಗೇ ಗೊತ್ತಿದ್ದೋ ಗೊತ್ತಿಲ್ಲದೆಯೋ ಆ ಇಡೀ ಚಿತ್ರ ಆಳವಾದ ಅಲೆಗಳನ್ನು ಸಾಕಷ್ಟು ಸಮರ್ಥವಾಗಿ ಎಬ್ಬಿಸುವಂತೆ ಭಾಸವಾಯ್ತು.ಪ್ರಿಯಾಂಕ,ಕಂಗನಾ ಆಶ್ಚರ್ಯ ಹುಟ್ಟಿಸುವಷ್ಟು ಪ್ರತಿಭಾವಂತರಂತೆ ಕಂಡರು.ಫ಼್ಯಾಶನ್ ಜಗತ್ತಿನ ಥಳುಕಿನ ಹಿಂದಿರುವ ಯಾತನೆ,ದುರಂತಗಳನ್ನು ಕೆಲವು ಫ಼್ರೇಂಗಳಲ್ಲಿ ತೀಕ್ಷ್ಣ ಸಂಭಾಷಣೆಗಳ ಮೂಲಕ ಮನಮುಟ್ಟುವಂತೆ ಕಟ್ಟಿಕೊಟ್ಟಿರುವುದು ಸಿನಿಮಾದ ಹೆಗ್ಗಳಿಕೆ.

ಇದು ಕೇವಲ ಗ್ಲ್ಯಾಮರ್ ಜಗತ್ತಿನ ದುರಂತ ಎನಿಸದೆ ಎಲ್ಲಾ ಮಹತ್ವಾಕಾಂಕ್ಷಿಗಳ ಯಾತನೆ ಎನಿಸುವುದರಿಂದ ಹೆಚ್ಚು ಆಪ್ತವಾಗುತ್ತದೆ.ಯಶಸ್ಸಿನ ಬೆನ್ನಹಿಂದೆ ನಡೆಯಲು ಬೇಕಾದ ತೀಕ್ಷ್ಣ ದೃಷ್ಟಿ ಮತ್ತು ಕೆಚ್ಚೆದೆಯ ಕೃತ್ರಿಮ ಅನಿವಾರ್ಯತೆ ದಂಗುಬಡಿಸುತ್ತದೆ.
ಜನಪ್ರಿಯತೆಯ ತುತ್ತತುದಿಯಲ್ಲಿ ಕಾಣಸಿಗಬಹುದಾದ ಕಿತ್ತುತಿನ್ನುವ ಏಕಾಂತ,ಔದ್ಯೋಗಿಕ-ವೈಯಕ್ತಿಕ ಸಂಬಂಧಗಳ ತಾಕಲಾಟ,ಯಶಸ್ಸಿನ ಮೆಟ್ಟಿಲು ಏರುವಾಗ ಕಾಣಸಿಗುವ ಅವೇ ಮುಖಗಳನ್ನು ಇಳಿಯುವಾಗಲೂ ಎದುರುಗೊಳ್ಳಬೇಕಾದ ವೈರುಧ್ಯ,ನಮ್ಮತನವನ್ನು ಕಳೆದುಕೊಂಡು ಹೊಸ ಪರಿಮಳ-ಸದ್ದು-ಸ್ಪರ್ಶ ಎಲ್ಲದ್ದಕ್ಕೂ ಅಪರಿಚಿತರಾಗಿಬಿಡುವ ದುರಂತ,...ಇವೆಲ್ಲವನ್ನೂ ಬಹುದಿನಗಳವರೆಗೂ ಕಾಡುವಂತೆ ನಮ್ಮೊಂದಿಗೆ ಉಳಿಸಿಬಿಡುವಷ್ಟು ಶಕ್ತವಾಗಿದೆ ಈ ಚಿತ್ರ.

ಕಡೆಗೂ ಯಾವುದೇ ಯಶಸ್ಸು,ಒಣಪ್ರತಿಷ್ಠೆ,ಢಾಂಬಿಕತೆಯ ತಲೆಗೆ ಹೊಡೆದಂತೆ ತನ್ನ ಸ್ಥಿತಿ ಸ್ಥಾಪಿಸುವುದು ಮಾತ್ರ ಮನುಷ್ಯ ಸಂಬಂಧಗಳ ಬೆಚ್ಚನೆಯ ಸ್ಪರ್ಶ,ಪ್ರೀತಿ,ಮಮಕಾರದ ಹಂಬಲ...

’Fashion’ ಇನ್ನಷ್ಟು 'passionate' ಆಗಲು ಸಾಧ್ಯವಿತ್ತೇನೋ ಅನಿಸಿದರೂ ಹೊಸಪ್ರಯತ್ನಕ್ಕೆ ಕೈಹಾಕಿರುವ ಭಂಡಾರ್ಕರ್ ’ಸೌಂದರ್ಯ’ ಮೆಚ್ಚಲೇಬೇಕು !

Sunday, October 19, 2008

ಮೋಹದ ಮಾಯೆಗೆ ಯಾವ ರಾಗದ ಹಂಗು..?!




ಬರೆಯಲು ಹೊರಟಿದ್ದು ನೆಚ್ಚಿನ ಕಲಾವಿದನ ಬಗ್ಗೆ. ಬರೆಸಿಕೊಳ್ಳುತ್ತಿರುವುದು ಮಾತ್ರ ನನ್ನೊಂದಿಗೇ ಉಳಿದುಬಿಟ್ಟ ಹಳೆಯ ಗೆಳೆಯನ ನೆನಕೆ. ಎಷ್ಟು ತಾತ್ಸಾರ,ಜಿಗುಪ್ಸೆ,ಕೋಪ ಹುಟ್ಟಿಸಿಕೊಳ್ಳಲು ಪ್ರಯತ್ನಿಸಿದರೂ ಕೊನೆಗೆ ಆವರಿಸಿಬಿಡುವುದು ಆತನ ಒದ್ದೆಕಂಗಳ ಮುದುಡಿದ ಮುಖ,ನಿಸ್ಸಹಾಯಕ ನೋಟ,..ಎಷ್ಟು ಬಗೆದರೂ ತೀರದ ಪ್ರೀತಿಯೊರತೆಯ ಎದೆ...

ಪುಸ್ತಕ ತಿರುವುತ್ತಾ ಸಿಕ್ಕಿದ್ದು - ನಾನು ತೆಗೆದ ಆತನ ಫೋಟೊ. ನಕ್ಕಾಗ ಕಣ್ಪಕ್ಕ ಬೀಳುವ ಗೆರೆ,ಮೀಸೆಯಂಚು,ನಗುಮೆತ್ತಿಕೊಂಡ ಕೆನ್ನೆ ಕಿವಿ ಕುತ್ತಿಗೆ ಇಷ್ಟು ಮಾತ್ರ ಇರುವ ಆತನ ಅದ್ಭುತ ಭಾವ ಚಿತ್ರ ಅದು..! ಹಲವು ವರ್ಷಗಳ ನಂತರ ಯಾಕೋ ಮತ್ತೆ ಆರ್ದ್ರಗೊಳಿಸುತ್ತಿದೆ. ’ಎಮೋಶನಲ್ ಆಗ್ಬ್ಯಾಡ್ಲೆ ಚೆರಿ’ ಎನ್ನುವ ಗೆಳೆಯರ ಕಳಕಳಿಯನ್ನು ಪ್ರೀತಿಯಿಂದ ಪಕ್ಕಕ್ಕಿಟ್ಟು , ತುಸು ಹೊತ್ತು ಮೌನವಾಗಿ ಪ್ರಾಮಾಣಿಕ ಕ್ಷಣಗಳನ್ನು ಪುರಸ್ಕರಿಸಿಬಿಡುವ ಮೋಹ..!

ಈ ಕ್ಷಣದ ’ನಿಜ’ವೆಂಬುದು ಮರುಕ್ಷಣದಲ್ಲಿ ಮತ್ತೆಂದೂ ಬದಲಿಸಲಾಗದ ವೇಷ ತೊಟ್ಟುಬಿಡುವುದು,ಗಂಟಲಲ್ಲಿ ನುಂಗಲಾರದ ತಳಮಳವಾಗಿ ಉಳಿದುಬಿಡುವುದು, ಯಾವ ಬಣ್ಣ ಬಳಿದರೂ ಮರುಕಳಿಸದೆ ಮರೆಯಾಗಿಬಿಡುವುದು, ಸಣ್ಣ ಹತಾಶೆಯ ನಗುವಾಗಿ ಸದಾಕಾಲ ತುಟಿಯಂಚಿನಲ್ಲಿ ಜಾಗ ಪಡೆದುಬಿಡುವುದು... ಗಹಗಹಿಸಿ ನಕ್ಕು ಈ ಎಲ್ಲವನ್ನೂ ಅಲೆಅಲೆಯಾಗಿ ಬಹುದೂರ ತೇಲಿಬಿಟ್ಟುಬಿಡುವ ತುಡಿತ..!

ಭಾವನೆಗಳನ್ನು ತಕ್ಕಡಿಯಲ್ಲಿ ತೂಗಿ,ಅಳೆದು,ಲೆಕ್ಕ ಸಮಗೊಳಿಸಿ..ಪೊಟ್ಟಣ ಕಟ್ಟಿ,..ಬಿಟ್ಟಿ ಹಂಚಿಬಿಡುವುದು ಯಾವ ಘನೋದ್ದೇಶಕ್ಕೋ ಏನೋ !

ಈ ’ಪ್ರೀತಿ-ಪ್ರೇಮ'ಎಂಬ ತುಮುಲವನ್ನು ವೇದಿಕೆ ಹತ್ತಿಸಿ,ಹಾರ ಹಾಕಿ,ಚಪ್ಪಾಳೆ ತಟ್ಟಿ, ಫೋಟೊ ತೆಗೆದು ಶಾಶ್ವತವಾಗಿ ಆಲ್ಬಮ್ ಮಾಡಿ ಸಮಾಧಾನಗೊಳಿಸುವುದು ಸ್ವಲ್ಪ ಜಾಣತನ ಇರಬಹುದು.ಆದರೆ ವ್ಯಂಗ್ಯ,ವಿಮರ್ಶೆ ಎಲ್ಲವು ಅಂತಿಮವಾಗಿ ನಮ್ಮ ನಮ್ಮ ಭಾವಚಿತ್ರಗಳೇ ಆಗಿರುತ್ತವೆ..

ಕಾಡುವ ನೆನಪುಗಳನ್ನು ಯಾವುದಾದರೂ ನೆಪದಲ್ಲಿ ಹಾಳೆಗಳ ನಡುವೆ..ಪೆನ್ಸಿಲ್ ಬಾಕ್ಸ್ ಒಳಗೆ..ಅಥವ ಬಾಚಣಿಗೆಯ ಹಲ್ಲುಗಳ ಮಧ್ಯೆ..ಕಡೆ ಪಕ್ಷ ಕುರ್ತಾ ಜೇಬಿನಲ್ಲೆಲ್ಲಾದರೂ ಅಡಗಿಸಿಟ್ಟು ಮರೆತುಬಿಡುವ ಹುನ್ನಾರ ಯಾಕೋ ಕೈಗೂಡುವಂತೆ ಕಾಣುತ್ತಿಲ್ಲ....

ನಾನು ಗಂಭೀರ ವಿದ್ಯಾರ್ಥಿಯಾಗಲು ಹವಣಿಸಿದಾಗೆಲ್ಲ ಹೀಗೆ ಏನಾದರೊಂದು ನೆಪ ಹಣಕಿ ಹಾಕುತ್ತ ಗೋಳಾಡಿಸುವುದು ಗಮನಿಸಿದರೆ, ಇದು ಟಾಲ್ಸ್ಟಾಯ್ ಕಥೆಗಳಲ್ಲಿ ಬರುವ ಸೈತಾನನ ಮಸಲತ್ತು ಇರಬಹುದೆಂಬ ಸಂದೇಹ ಗಟ್ಟಿಯಾಗುತ್ತಿದೆ.ಆ ಮಹಾಶಯ ಕಾಣಲು ಸಿಕ್ಕರೆ,ಬಳಿ ಕೂರಿಸಿಕೊಂಡು ಪುಸಲಾಯಿಸಿ ಬೀಳ್ಕೊಡುವ ಮಾರ್ಗ ಹುಡುಕುತ್ತಿದ್ದೇನೆ.

Friday, September 26, 2008

ಮಳೆ ಮಾತು



ನಿಧಾನವಾಗಿ ಎಚ್ಚರಿಸುವಂತೆ
ಶುರುವಾದ ಚುರುಚುರು ಹನಿ
ಚುಚ್ಚಿದರೂ ಬೆಚ್ಚದ ನನ್ನ ಕಂಡು
ಸೆಟಗೊಂಡು ರಪ ರಪ ಬಿರುಸಾಯಿತು
ನೀಲಿ ಹೂಗಳ ಛತ್ರಿ ಪಾಪ,ಸಹಿಸೀತೆ?
ಒಡ್ಡಿತು ತನ್ನೊಂದಿಗೆ ನನ್ನನ್ನೂ...
ಚಳಿಯಿನ್ನೂ ಮುದುಡಿತ್ತು ಒಳಗೆ ಬೆಚ್ಚಗೆ

ಮಳೆಯೇ ನಾಚಿರಬೇಕು
ನನ್ನ ಪಾಡಿಗೆ ನಾನಿರುವ ಬಗೆಗೆ
ಪಟ್ಟಿರಬೇಕು ಪಶ್ಚಾತ್ತಾಪ ತನ್ನ ಪರಿಗೆ
ಕಿವಿಗೊಟ್ಟ ಕಣ್ಬಿಟ್ಟ ಗೆಳತಿಯ ಕಂಡು
ಭ್ರಮಿಸಿರಬೇಕು ಇನ್ನೊಂದು ಸುತ್ತು ಹೆಚ್ಚಿಗೆ

ತೋಯಿಸಿತು ಬರಿಮೈಯ ಇರವು ಅರಿವಾಗುವಂತೆ
ಮನದಣಿಯೆ ಹರಟಿತು ದುಃಖ ದುಮ್ಮಾನ
ಕೊಚ್ಚಿಹೋಗಿತ್ತು ಬಿರುಸು ಬಿಗುಮಾನ
ಬಿಚ್ಚಿ ಹರಡಿತು ಏರಿಳಿತದ ಗಾನ
ಗುಟ್ಟು ಪಿಸುಗುಟ್ಟಿ ನಕ್ಕಿತೇಳು ಬಣ್ಣಗಳ
ದಿಟ್ಟಿ ನೆಡುವಂತೆ...
ಬೆಚ್ಚನೆ ಮೈದುಂಬಿತು ಮುದ್ದಿಸಿ ಹಸಿಬಿಸಿಲ

...ಮತ್ತೆ ಗುಟ್ಟಾಡಲು,...
ಹಚ್ಚನೆ ಹರಟಿ ಹರಡಲು
ನಾನೂ ಕಾಯುತ್ತಿರುವೆ...
ಮಳೆ ಮಾತು ಪೋಣಿಸಲು
ಹನಿಹನಿಯಾಗಿ ತೊಡಲು